Mind Sharing?

ವಂಚನೆಗೊಳಗಾದ ಎ.ನಾರಾಯಣಪುರ ನಿವಾಸಿ ಯುವತಿ ನೀಡಿದ ದೂರಿನ ಮೇರೆಗೆ ಪಾಂಡಿಚೇರಿ ಮೂಲದ ಕಾರ್ತಿಕ್‌ ಎಂಬಾತನ ವಿರುದ್ಧ ಮಹದೇವಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯುವತಿ ಖಾಸಗಿ ಕಂಪನಿ ಉದ್ಯೋಗಿಯಾಗಿರುವ ಯುವತಿಗೆ ಇನ್‌ಸ್ಟಾಗ್ರಾಮ್‌ನಲ್ಲಿ 2017ರಲ್ಲಿ ಕಾರ್ತಿಕ್‌ ಎಂಬಾತ ಪರಿಚಯವಾಗಿದ್ದ. ಇಬ್ಬರು ಪರಸ್ಪರ ಫೋನ್‌ ನಂಬರ್‌ ವಿನಿಮಯ ಮಾಡಿಕೊಂಡಿದ್ದರು. 2018ರಲ್ಲಿ ಶಾಪಿಂಗ್‌ ಮಾಲ್‌ವೊಂದರಲ್ಲಿ ಇಬ್ಬರು ಮುಖತಃ ಭೇಟಿಯಾಗಿದ್ದರು. ತಾನು ಯೂನಿಟ್‌ ಇನ್‌ ಎಂಬ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಬಾಣಸವಾಡಿಯಲ್ಲಿ ಕಚೇರಿ ಇದೆ ಎಂದು ಹೇಳಿದ್ದ.

ಇಬ್ಬರ ನಡುವಿನ ಸ್ನೇಹ ಪ್ರೀತಿಗೆ ತಿರುಗಿತ್ತು. ಬಳಿಕ ಮೂರು ತಿಂಗಳಿಗೊಮ್ಮೆ ಕಾರ್ತಿಕ್‌ ಬೆಂಗಳೂರಿಗೆ ಬಂದು ಭೇಟಿಯಾಗಿ ಹೋಗುತ್ತಿದ್ದ. ಈ ಅವಧಿಯಲ್ಲಿಯೇ ಹಂತ-ಹಂತವಾಗಿ 2 ಲಕ್ಷ ನಗದು ಹಾಗೂ 6 ಗ್ರಾಂ. ಚಿನ್ನದ ಉಂಗುರು ಪಡೆದುಕೊಂಡಿದ್ದ.

ನಂತರ ನಮ್ಮ ಮದುವೆಗೆ ಪೋಷಕರು ಒಪ್ಪುತ್ತಿಲ್ಲ. ಹೀಗಾಗಿ ನಿನ್ನನ್ನು ಮದುವೆಯಾಗುವುದಿಲ್ಲ ಎಂದು ಸಬೂಬು ಹೇಳಿದ್ದ. ಅಲ್ಲದೆ, ಪ್ರೀತಿಸಿರುವ ವಿಚಾರವನ್ನೇ ಇಟ್ಟುಕೊಂಡು ಎಲ್ಲಿಗಾದರೂ ಹೋದರೆ, ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದ. ಖಾಸಗಿ ಫೋಟೋಗಳನ್ನು ಜಾಲತಾಣದಲ್ಲಿ ಅಪ್‌ಲೋಡ್‌ ಮಾಡುವುದಾಗಿ ಬ್ಲ್ಯಾಕ್‌ಮೇಲ್‌ ಮಾಡಿದ್ದಾನೆ. ಇತ್ತೀಚೆಗೆ ಫೋನ್‌ ಸಂಪರ್ಕಕ್ಕೂ ಸಿಗದೆ ನಾಪತ್ತೆಯಾಗಿದ್ದಾನೆ. ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆರೋಪಿಸಿ ಸಂತ್ರಸ್ತ ಯುವತಿ ದೂರಿನಲ್ಲಿ ವಿವರಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Mind Sharing?